ಬೆಳಗಾನ ನೋಡೋರಿಲ್ಲ ಯಕ್ಷಗಾನಕ್ಕೂ ಕಾಲಮಿತಿ?
ಲೇಖಕರು : ಆತ್ಮಭೂಷಣ್
ಬುಧವಾರ, ಜುಲೈ 17 , 2013
|
`
ಕರಾವಳಿಯಲ್ಲಿ ವೃತ್ತಿ ಮೇಳಗಳು ಇಡೀ ರಾತ್ರಿ ಪ್ರದರ್ಶಿಸುವ ಗಂಡುಮೆಟ್ಟಿನ ಕಲೆ ಯಕ್ಷಗಾನವನ್ನು ಇನ್ನು ಮುಂದೆ ಕಾಲಮಿತಿಗೆ ಒಳಪಡಿಸಿದರೆ ಹೇಗೆ?
ಅಂದರೆ ರಾತ್ರಿಪೂರ್ತಿ ಎಂಟು ಗಂಟೆ ಕಾಲ ಪ್ರದರ್ಶನಗೊಳ್ಳುವ ಯಕ್ಷಗಾನ ಪ್ರಸಂಗವನ್ನು ಕೇವಲ ನಾಲ್ಕೈದು ಗಂಟೆಗಳಿಗೆ ಸೀಮಿತಗೊಳಿಸುವುದು ಸಾಧ್ಯವೇ? ಇದರಿಂದ ಯಕ್ಷಗಾನ ಪ್ರಸಂಗದ ರಸಾನುಭವಕ್ಕೆ, ಕಥಾ ಹಂದರಕ್ಕೆ ತೊಡಕಾಗುತ್ತದೆಯೇ? ಕಾಲಮಿತಿ ಎಂದರೆ ಎಷ್ಟು ಗಂಟೆಯವರೆಗೆ? ಹರಕೆ ಪ್ರದರ್ಶನಗಳ ಕಥೆ ಏನು? ಹೀಗೆ ಒಂದೊಂದು ಜಿಜ್ಞಾಸೆಗೂ ಶೀಘ್ರವೇ ಉತ್ತರ ಸಿಗಲಿದೆ.
ಹಿಂದಿನ ಕಾಲದಂತೆ ರಾತ್ರಿಪೂರ್ತಿ ಟೆಂಟ್ನಲ್ಲಿ ಕುಳಿತು ಯಕ್ಷಗಾನ ಪ್ರದರ್ಶನ ನೋಡುಗರ ಸಂಖ್ಯೆ ಇಳಿಮುಖಗೊಂಡಿದೆ. ಈ ಹಿನ್ನಲೆಯಲ್ಲಿ ಎಲ್ಲ ವೃತ್ತಿ ಮೇಳಗಳ ಕಾಲಮಿತಿಯಲ್ಲಿ ಯಕ್ಷಗಾನ ಪ್ರದರ್ಶನ ಸಾಧ್ಯವೇ ಎಂಬ ಕುರಿತು ಜುಲೈನಲ್ಲಿ ಯಕ್ಷಗಾನ ವೃತ್ತಿ ಮೇಳಗಳ ಯಜಮಾನರೊಂದಿಗೆ ಚರ್ಚೆ ನಡೆಯಲಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಈ ಸಭೆಯ ನೇತೃತ್ವ ವಹಿಸಲಿದ್ದಾರೆ.
ಕಾಲಮಿತಿ ಪ್ರಸ್ತಾಪ ಯಾಕಾಗಿ?: ಇತ್ತೀಚೆಗೆ ಯಕ್ಷಗಾನ ನಡೆಯುವಾಗ ರಾತ್ರಿ 12 ಗಂಟೆ ನಂತರ ಪ್ರೇಕ್ಷಕರು ಬೆರಳೆಣಿಕೆಯಲ್ಲಿರುತ್ತಾರೆ. ಕೃಷಿ ಮೂಲದವರಿಗೆ ಮಾತ್ರ ನಿದ್ದೆಗೆಟ್ಟು ಅಭ್ಯಾಸವಿರುತ್ತದೆ. ಹಿಂದೆ ಇದ್ದಂತೆ ಈಗ ಬೆಳಗಿನ ವರೆಗೆ ಯಕ್ಷಗಾನ ನೋಡಲು ಆರೋಗ್ಯ, ಶಕ್ತಿ, ಉತ್ಸಾಹ ಈಗಿನವರಲ್ಲಿ ಕಡಿಮೆ. ಬೆಳಗ್ಗಿನವರೆಗೆ ಆಟ ನೋಡುವವರ ಸಂಖ್ಯೆ ಕೇವಲ 10-20 ಮಂದಿಗೆ ಇಳಿದದ್ದೂ ಇದೆ. ಇದರಿಂದ ಕಲಾವಿದರಿಗೆ ನಿರುತ್ಸಾಹ, ಪ್ರೇಕ್ಷಕರ ಸ್ಪಂದನ ಸಿಗದಿದ್ದರೆ ಪ್ರಸಂಗದಲ್ಲೂ ನಿರಾಸಕ್ತಿ. ಮುಖ್ಯವಾಗಿ ಇದರಿಂದ ರಂಗಸ್ಥಳದಲ್ಲಿ ಶಕ್ತಿಮೀರಿ ದುಡಿಯುವ ಕಲಾವಿದರೂ ಬೇಸರಗೊಳ್ಳುತ್ತಿದ್ದಾರೆ ಎನ್ನುತ್ತಾರೆ ಡಾ.ಹೆಗ್ಗಡೆ.
30ಕ್ಕೂ ಅಧಿಕ ಮೇಳಗಳು: ಕರಾವಳಿಯಲ್ಲಿ ತೆಂಕು, ಬಡಗು ಸೇರಿ 30ಕ್ಕೂ ಅಧಿಕ ಮೇಳಗಳು ತಿರುಗಾಟ ನಡೆಸುತ್ತಿವೆ. ವರ್ಷದಲ್ಲಿ ನವೆಂಬರ್ನಿಂದ ಮೇವರೆಗೆ ಯಕ್ಷಗಾನ ಪ್ರದರ್ಶನ ನೀಡುತ್ತಿವೆ. ತೆಂಕು ತಿಟ್ಟಿನಲ್ಲಿ 10ಕ್ಕಿಂತ ಕಡಿಮೆ ಮೇಳಗಳಿದ್ದರೆ, ಉಳಿದದ್ದು ಬಡಗು ತಿಟ್ಟಿನ ಪಾರಮ್ಯ. ಮಳೆಗಾಲದಲ್ಲಿ ಹೆಚ್ಚಿನ ಕಲಾವಿದರಿಗೆ ಬಿಡುವಿಲ್ಲ. ವಿವಿಧ ಕಡೆಗಳಲ್ಲಿ ಆಯ್ದ ಕಲಾವಿದರು ಯಕ್ಷಗಾನ ಪ್ರದರ್ಶನ ನೀಡುತ್ತಾರೆ.
ಕಾಲಮಿತಿ ಪ್ರದರ್ಶನ ಮೊದಲು ಪ್ರಾರಂಭಿಸಿದ್ದು ದಿ.ಶಂಭು ಹೆಗಡೆ ನೇತೃತ್ವದ ಇಡಗುಂಜಿ ಮೇಳ, ನಂತರ ಹೊಸನಗರ ಮೇಳ, ಈಗ ಪುರ್ಣಚಂದ್ರ ಮೇಳ ಕೊಂಡದಕುಳಿ ಹಾಗೂ ಎಡನೀರು ಮೇಳ. ಹೀಗಿರುವಾಗ ಇಂದಿನ ದಿನಗಳಲ್ಲಿ ಕಾಲಮಿತಿ ಪ್ರದರ್ಶನವೇ ಸೂಕ್ತ ಎನ್ನುತ್ತಾರೆ ಹವ್ಯಾಸಿ ಯಕ್ಷಗಾನ ಭಾಗವತ ಎಂ.ಎಚ್. ಪ್ರಸಾದ್ ಕುಮಾರ್.
ಪ್ರೇಕ್ಷಕಕರ ಕಲಾಸ್ವಾದನೆಯ ಮನಸ್ಸನ್ನು ಸಿದ್ಧಗೊಳಿಸಿಯೇ ಕಾಲಮಿತಿ ಯಕ್ಷಗಾನ ಅನುಷ್ಠಾನಕ್ಕೆ ತರಬಹುದು. ಬದಲಾದ ಕಾಲಘಟ್ಟದಲ್ಲಿ ಕಾಲಮಿತಿ ಯಕ್ಷಗಾನದ ಬೇಡಿಕೆ ಇಂದು ನಿನ್ನೆಯದಲ್ಲ. ಕಳೆದ 10 ವರ್ಷಗಳಿಂದಲೂ ಕಾಲಮಿತಿ ಬಗ್ಗೆ ವಿವಿಧ ಚರ್ಚೆಗಳು ನಡೆಯುತ್ತಿದೆ.
ಕೃಪೆ : http://kannadaprabha.com
|
|
|